ಕರ್ನಾಟಕ ಸರಕಾರವು ರಾಜ್ಯದ ಶಾಲೆಗಳಲ್ಲಿ ಯೋಗಶಿಕ್ಷಣವನ್ನು ಕಡ್ಡಾಯಗೊಳಿಸುವ ಯೋಜನೆಯನ್ನು ಹಾಕಿಕೊಂಡಿದ್ದು, ಈ ಬಗ್ಗೆ ಮಾಹಿತಿ ಕಾಯಿದೆಯಡಿಯಲ್ಲಿ ನಾವು ಪಡೆದಿರುವ ವಿವರಗಳನ್ನು ಗಮನಿಸಿದರೆ, ರಾಜ್ಯಾದ್ಯಂತ ಒಂದನೇ ತರಗತಿಯಿಂದಲೇ ಮಕ್ಕಳಿಗೆ ಯೋಗ ತರಬೇತಿಯನ್ನು ನೀಡುವ ಯೋಜನೆಯಿರುವುದು ಕಂಡುಬರುತ್ತಿದೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಪ್ರಕಾರ, ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ವಾರಕ್ಕೆ 5 ಅವಧಿಗಳು, 6-7 ತರಗತಿಗಳಿಗೆ ವಾರಕ್ಕೆ 3 ಅವಧಿಗಳು ಮತ್ತು 8-10 ತರಗತಿಯವರಿಗೆ ವಾರಕ್ಕೆ 4 ಅವಧಿಗಳ ದೈಹಿಕ ಶಿಕ್ಷಣದ ಭಾಗವಾಗಿ ಯೋಗ ಶಿಕ್ಷಣವಿದ್ದು, ಐದನೇ ತರಗತಿಯಿಂದ ತಾತ್ವಿಕ ಹಾಗೂ ಪ್ರಾಯೋಗಿಕ ಶಿಕ್ಷಣಗಳೆರಡೂ ಪಠ್ಯಕ್ರಮದಲ್ಲಿರುತ್ತವೆ ಮತ್ತು ಒಂದನೇ ತರಗತಿಯಿಂದಲೇ ಮಕ್ಕಳಿಗೆ ಯೋಗಾಭ್ಯಾಸದಲ್ಲಿ ನಿರಂತರ ಮೌಲ್ಯಮಾಪನ ಪರೀಕ್ಷೆಗಳಿರುತ್ತವೆ. ರಾಜ್ಯದ ಎಲ್ಲಾ ಪ್ರಾಥಮಿಕ ಹಾಗೂ ಫ್ರೌಢ ಶಾಲೆಗಳಲ್ಲಿ ಇದಕ್ಕಾಗಿ ರೂ.4.55 ಕೋಟಿ ವೆಚ್ಚದಲ್ಲಿ ಒಟ್ಟು 65000 ಶಿಕ್ಷಕರನ್ನು ನಿಯುಕ್ತಿಗೊಳಿಸಲಾಗುವುದೆಂದೂ ಇಲಾಖೆಯು ಹೇಳಿದೆ.
ರಾಜ್ಯ ಸರಕಾರದ ಈ ನಿರ್ಧಾರವು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಆಧರಿಸಿಲ್ಲವೆನ್ನುವುದು ಸ್ಪಷ್ಟವಾಗಿದೆ. ಯೋಗಾಭ್ಯಾಸದ ಒಳಿತು-ಕೆಡುಕುಗಳ ಬಗ್ಗೆ ಹಲವಾರು ಸಣ್ಣದಾದ, ಅಲ್ಪಕಾಲೀನ ಅಧ್ಯಯನಗಳನ್ನು ನಡೆಸಲಾಗಿದ್ದು, ಎಲ್ಲರಿಗೂ ಒಂದೇ ರೀತಿಯ ಯೋಗಾಭ್ಯಾಸದಿಂದ ನಿಸ್ಸಂದೇಹವಾದ ಪ್ರಯೋಜನವಿದೆಯೆಂದಾಗಲೀ, ಅದು ಸಂಪೂರ್ಣವಾಗಿ ಸುರಕ್ಷಿತವೆಂದಾಗಲೀ ಶ್ರುತ ಪಡಿಸುವ ಯಾವುದೇ ದೊಡ್ದ, ದೀರ್ಘಕಾಲೀನ, ಇಕ್ಕಡೆಗೂ ಅರಿವಿಲ್ಲದ, ನಿಯಂತ್ರಿತವಾದ ಅಧ್ಯಯನಗಳ ವರದಿಗಳಿಲ್ಲ. ಅಷ್ಟೇ ಅಲ್ಲದೆ, ಯೋಗಾಭ್ಯಾಸದಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲಾಗಬಹುದಾದ ಒಳಿತು-ಕೆಡುಕುಗಳ ಬಗ್ಗೆ ಯಾವುದೇ ಅಧ್ಯಯನಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ವತಿಯಿಂದಲೂ ನಡೆಸಲಾಗಿಲ್ಲ. ಮಕ್ಕಳ ಬೆಳವಣಿಗೆ ಹಾಗೂ ಆರೋಗ್ಯಗಳ ದೃಷ್ಟಿಯಿಂದ ಯೋಗಾಭ್ಯಾಸವು ಇತರ ದೈಹಿಕ ವ್ಯಾಯಾಮ ಅಥವಾ ಆಟೋಟಗಳಷ್ಟೇ ಪ್ರಯೋಜನಕರವೆಂದು ಸಾಬೀತು ಪಡಿಸುವ ಯಾವುದೇ ವರದಿಗಳಾಗಲೀ, ಅದರಿಂದ ಮಕ್ಕಳ ಸ್ಮರಣ ಶಕ್ತಿ ಅಥವಾ ಇನ್ನಿತರ ಸಾಮರ್ಥ್ಯಗಳ ಮೇಲೆ ಯಾವುದೇ ಪರಿಣಾಮಗಳುಂಟಾಗುವ ಬಗೆಗಿನ ಅಧ್ಯಯನಗಳಾಗಲೀ, ಅಥವಾ ದೇಹದ ವಿವಿಧ ಅಂಗಗಳು ಹಾಗೂ ಎಲುಬುಗಳು ಇನ್ನೂ ಬೆಳೆಯುತ್ತಿರುವ ಮಕ್ಕಳಲ್ಲಿ ಯೋಗಾಭ್ಯಾಸವು ಸುರಕ್ಷಿತವೆಂದು ಶ್ರುತಪಡಿಸುವ ವರದಿಗಳಾಗಲೀ ಲಭ್ಯವಿಲ್ಲ. ಅಲ್ಲದೆ, ಮಕ್ಕಳ ಮೇಲೆ ಈಗಾಗಲೇ ವಿದ್ಯಾಭ್ಯಾಸದ ಹೊರೆಯು ಅತಿಯಾಗಿದ್ದು, ಯೋಗಾಭ್ಯಾಸವನ್ನು ಪೂರ್ಣ ಪ್ರಮಾಣದ ವಿಸ್ತೃತ ಪಠ್ಯವಾಗಿ ಸೇರಿಸುವುದರಿಂದ ಈ ಹೊರೆಯು ಇನ್ನಷ್ಟು ಹೆಚ್ಚುವ ಅಪಾಯವೂ ನಿಚ್ಚಳವಾಗಿದೆ. ವಿವಿಧ ಕ್ರೀಡಾ ಪ್ರಕಾರಗಳಲ್ಲಿ ನಮ್ಮ ಮಕ್ಕಳು ಹಾಗೂ ಯುವಕರನ್ನು ತರಬೇತುಗೊಳಿಸಿ ಒಲಿಂಪಿಕ್ ಇತ್ಯಾದಿಗಳ ಸ್ಪರ್ಧಾತ್ಮಕ ಕ್ರೀಡಾರಂಗದಲ್ಲಿ ನಮ್ಮ ದೇಶದ ಸ್ಥಾನಮಾನಗಳನ್ನು ಔನ್ನತ್ಯಕ್ಕೆ ಒಯ್ಯಬೇಕಾದ ತುರ್ತು ಅಗತ್ಯವಿರುವ ಇಂದಿನ ಕಾಲಘಟ್ಟದಲ್ಲಿ, ಕೇವಲ ಯೋಗಶಿಕ್ಷಣವೊಂದಕ್ಕೇ ಇತರೆಲ್ಲಾ ದೈಹಿಕ ಕಸರತ್ತುಗಳು ಹಾಗೂ ಕ್ರೀಡೆಗಳಿಗೆ ಯಾವತ್ತೂ ಮೀಸಲಿಟ್ಟದ್ದಕ್ಕಿಂತ ಎಷ್ಟೋ ಹೆಚ್ಕು ಪಟ್ಟು ಅವಧಿಯನ್ನು ಒದಗಿಸುವುದರಿಂದ ಈ ಎಲ್ಲಾ ಕ್ರೀಡೆಗಳಲ್ಲಿ ನಮ್ಮ ಮಕ್ಕಳು ಹಾಗೂ ಯುವಜನರ ಭಾಗವಹಿಸುವಿಕೆಯು ಇನ್ನಷ್ಟು ಅಧೋಗತಿಗಿಳಿಯುವುದಕ್ಕೆ ಕಾರಣವಾಗಬಹುದು. ಹಾಗಿರುತ್ತಾ, ಒಂದನೇ ತರಗತಿಯ ಮಕ್ಕಳಿಂದ ಹಿಡಿದು ಎಲ್ಲಾ ವಿದ್ಯಾರ್ಥಿಗಳಿಗೆ ವಿಸ್ತೃತವಾಗಿ ಏಕರೂಪದ ಯೋಗಾಭ್ಯಾಸವನ್ನು ಮಾಡಿಸುವುದರ ವಿವೇಚನೆಯ ಬಗ್ಗೆಯೂ, ಅಂತಹ ಯೋಗಾಭ್ಯಾಸದಿಂದ ಮಕ್ಕಳ ದೈಹಿಕ ಅಥವಾ ಮಾನಸಿಕ ಆರೋಗ್ಯದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ಗುರುತಿಸಿ, ನಿಭಾಯಿಸುವಲ್ಲಿ ಶಿಕ್ಷಕರಲ್ಲಿರಬೇಕಾದ ಸನ್ನದ್ಧತೆಯ ಬಗ್ಗೆಯೂ ಹಲವು ಪ್ರಶ್ನೆಗಳು ಸಹಜವಾಗಿಯೇ ಏಳುತ್ತವೆ.
ಆದ್ದರಿಂದ ಮಕ್ಕಳ ಆರೋಗ್ಯ ಹಾಗೂ ಭವಿಷ್ಯದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಬಲ್ಲ ಇಂತಹಾ ನಿರ್ಧಾರಗಳನ್ನು ತರಾತುರಿಯಲ್ಲಿ ಕೈಗೊಳ್ಳುವ ಮೊದಲು ಆ ಕುರಿತು ಸಾಕಷ್ಟು ವೈಜ್ಞಾನಿಕ ಅಧ್ಯಯನಗಳನ್ನು ನಡೆಸಬೇಕೆಂದೂ, ಮಕ್ಕಳು, ಹೆತ್ತವರು, ವೈದ್ಯಕೀಯ ತಜ್ಞರು, ಕ್ರೀಡಾಪಟುಗಳು ಹಾಗೂ ಶಿಕ್ಷಣ ತಜ್ಞರಿಂದ ವ್ಯಾಪಕ ಅಭಿಪ್ರಾಯಗಳನ್ನು ಪಡೆದುಕೊಂಡು ಆ ಕುರಿತಾದ ಸರ್ವ ಸಮ್ಮತ ನೀತಿಯೊಂದನ್ನು ರೂಪಿಸಬೇಕೆಂದೂ ನಾವು ಕರ್ನಾಟಕ ಸರಕಾರವನ್ನು ಆಗ್ರಹಿಸುತ್ತೇವೆ. ಯಾವುದೇ ಸಂದರ್ಭದಲ್ಲೂ ಬೆಳೆಯುವ ಮಕ್ಕಳಿಗೆ ಕಡ್ದಾಯವಾದ ಯೋಗಶಿಕ್ಷಣವು ಅಪೇಕ್ಷಣೀಯವಲ್ಲ.
ಡಾ| ಶ್ರೀನಿವಾಸ ಕಕ್ಕಿಲ್ಲಾಯ, ತಜ್ಞ ವೈದ್ಯರು, ಮಂಗಳೂರು
ಪ್ರೊ|ನರೇಂದ್ರ ನಾಯಕ್, ಜೀವರಸಾಯನಶಾಸ್ತ್ರಜ್ಞರು, ಅಧ್ಯಕ್ಷರು, ಅಖಿಲ ಭಾರತ ವಿಚಾರವಾದಿ ಸಂಘಗಳ ಒಕ್ಕೂಟ, ಮಂಗಳೂರು
ಡಾ| ಕೆ.ಎಸ್.ಮಾಧವ ರಾವ್, ಮನೋರೋಗ ತಜ್ಞರು, ಅಧ್ಯಕ್ಷರು, ದ.ಕ. ಜಿಲ್ಲಾ ವಿಚಾರವಾದಿಗಳ ಸಂಘ, ಮಂಗಳೂರು
ಪ್ರತಿಯೊಬ್
By ನರಸಿಂಹ ದೇಶಪಾಂಡೆ (not verified)ಪ್ರತಿಯೊಬ್ಬ ಮನುಷ್ಯನೂ ತೊಂದರೆಯಲ್ಲಿದ್ದಾಗ ಆ ತೊಂದರೆಯಿಂದ ಹೊರಬರಲು ಬಹಳಷ್ಟು ಉಪಾಯಗಳನ್ನು ಹುಡುಕುತ್ತಾನೆ, ಒಂದಾದಮೇಲೊಂದರಂತೆ. ಕೊನೆಗೆ ಯಾವುದರಿಂದ ತನಗೆ ಪರಿಹಾರ ಸಿಗುತ್ತೊ ಅದನ್ನೇ ಸರಿ ಎಂದು ಒಪ್ಪಿಕೊಳ್ಳುತ್ತಾನೆ. ಈಗ ಯೋಗದ ಪ್ರಸಿದ್ಧಿಗೂ ಇದೇ ಕಾರಣವಿರಬಹುದೇನೋ. ಯೋಗ ಕಡಿಮೆ ಖರ್ಚಿನಲ್ಲಿ ಅಡ್ಡ ಪರಿಣಾಮಗಳಿಲ್ಲದ ಪರಿಹಾರಗಳನ್ನು ತಂದುಕೊಟ್ಟರೆ ಅದನ್ನನುಸರಿಸುವದರಲ್ಲಿ ಏನು ತೊಂದರೆ. ಅಲೋಪತಿ ಔಷಧಗಳಿಂದ ಖರ್ಚೂ ಜಾಸ್ತಿ ಅಡ್ಡಪರಿಣಾಮಗಳ ಹೆದರಿಕೆ ಮತ್ತು ಗುಣವಾಗೇ ಆಗುತ್ತೆ ಎನ್ನುವ ಭರವಸೆಯೂ ಇಲ್ಲ. ಹೀಗಾಗಿ ಯೋಗವನ್ನು ಅನುಸರಿಸುವುದೇ ಜಾಸ್ತಿ ಅನುಕೂಲ ಎನಿಸುತ್ತದೆ.
ಚಿಕಿತ್ಸೆಯ ಆಯ್ಕೆಗೆ ಮಾನದಂಡ ಯಾವುದು?
By skakkilayaಯೋಗ ಕಡಿಮೆ ಖರ್ಚಿನಲ್ಲಿ ಅಡ್ಡ ಪರಿಣಾಮಗಳಿಲ್ಲದ ಪರಿಹಾರಗಳನ್ನು ತಂದುಕೊಟ್ಟರೆ ಅದನ್ನನುಸರಿಸುವುದು ಅದನ್ನೇ ಸರಿ ಎಂದು ಒಪ್ಪಿಕೊಂಡವರ ವಿವೇಚನೆಗೆ ಬಿಟ್ಟದ್ದು; ಅದಕ್ಕೆ ಯಾರ ಅಡ್ಡಿಯೂ ಇರಲಾರದು. ಅಲೋಪತಿ ಔಷಧಗಳಿಂದ ಅಡ್ಡಪರಿಣಾಮಗಳಿವೆ ಹಾಗೂ ಗುಣವಾಗೇ ಆಗುತ್ತೆ ಎನ್ನುವ ಭರವಸೆಯೂ ಇಲ್ಲ ಎನ್ನುವ ವಿವರಗಳನ್ನೆಲ್ಲ ಅಲೋಪತಿ ವೈದ್ಯರೇ ನೀಡುತ್ತಾರೆ, ಆ ಮಟ್ಟಿಗೆ ಅದು ಉಳಿದ ವಿಧಾನಗಳಿಗಿಂತ ಹೆಚ್ಚು ಪಾರದರ್ಶಕ. ಯೋಗದ ಅಡ್ದ ಪರಿಣಾಮಗಳ ಬಗ್ಗೆ ಅದರ ಅಧ್ಯಯನಗಳಲ್ಲಿ ಪಾರದರ್ಶಕವಾದ ಮಾಹಿತಿಯಿಲ್ಲ, ಅದು ಸಂಪೂರ್ಣ ಸುರಕ್ಷಿತ ಅಥವಾ ಅದರಿಂದ ಯಾವುದೇ ಕಾಹಿಲೆಯು ಗುಣವಾಗೇ ಆಗುತ್ತೆ ಎನ್ನುವ ಭರವಸೆಯು ಯಾವ ಅಧ್ಯಯನಗಳಲ್ಲೂ ಲಭ್ಯವಿಲ್ಲ. ಹೀಗಿರುವಾಗ, ಯೋಗವನ್ನು ಅನುಸರಿಸುವುದೇ ಜಾಸ್ತಿ ಅನುಕೂಲ ಎನಿಸುತ್ತದೆಯೆನ್ನುವುದಕ್ಕೆ ಆಧಾರಗಳಿವೆಯೇ?
ಕುಟಿಲ ಕಂಪನಿಗಳ ಹುನ್ನಾರ
By ಕುಮಾರಸ್ವಾಮಿ (not verified)ಇವತ್ತಿನ ಔಶದಿ ನಾಳಿನ ವಿಶವಾಗಿ ನಿಶೇದಿಸುವ ಅಲೋಪತಿ ಅಂತೆ ಕಂತೆಗಳ ಸರಮಾಲೆ, ಹುಸಿ ತೋರ್ಪಡಿಕೆ, ಲಾಭಗಳಿಸಲು ಕಂಪನಿಗಳು ಮಾಡಿರುವ ಸುಳ್ಳುಕಂತೆಗಳ ಹುನ್ನಾರ. ಈ ಬಹುರಾಶ್ಟರಿಯ ಕಂಪನಿಗಳ ಲಾಬಬಲೆಯನ್ನು ಸುರಕ್ಷಿತವಾಗಿಸಲು ನಿಮ್ಮಂತ ನಿಚಗೆಟ್ಟ ನರಸತ್ತ ನಾಮರದರ ಬಳಕೆ. ನಿನ್ನ ವಿಗ್ನಾನ ಕ್ರೂರಿ ಅನ್ನುವುದನ್ನು ನೂರಾರು ವರುಶಗಳಿಂದ ತೋರಿಸಿಕೊಂಡು ಬಂದಿದೆ. ಕ್ಯಾನ್ಸರ್ ನಂತ ಸಾವಿನ ಪಿಡುಗಗಳ ಹುಟ್ಟಿಗೆ ಹೊಣೆ ನಿನ್ನ ವಿಗ್ನಾನ. ನೀನೇಳುತ್ತಿರುವುದನ್ನು ಸುಳ್ಳು ಅನ್ನದೇ ಇನ್ನೇನು ಅನ್ನಬೇಕು?
ಬೆನ್ನು ನೋವಿಗೆ ಬೆನ್ನನ್ನೇ ಕೋಯ್ದು ನನ್ನ ಬೆನ್ನು ಮೂಳೆಯ ಹುರಿಯನ್ನು ಸಡಿಲಮಾಡಲು ಹೊರಟಿತ್ತು ಈ ನಿನ್ನ ಅಲೋಪತಿ. ನಮ್ಮಪ್ಪನನ್ನು ಬದುಕಿರುವ ಹೆಣವಾಗಿ ಮಾಡಿದೆ ಈ ನಿನ್ನ ಅಲೋಪತಿ. ಆಗ ಯೋಗದ ನಾಲ್ಕಾರು ಆಸನೆಗಳೆ ನನಗೆ ದಾರಿ ತೋರಿದವು. ಪೂರ್ವಗ್ರಹ ಬಿಟ್ಟು ಹಸನ ಬದಕು ಮಾಡುವುದು ಕಲಿತುಕೊಳ್ಳಿ. ಬಹುರಾಶ್ಟ್ರಿಯ ಕಂಪನಿಗಳು ಕೊಡುವ ಕಮಿಶನನ್ನು ನಾಯಿತರ ತಿಂದು ಏನೇನೋ ತಿರುಚಿ ಬರೆಯ ಬೇಡಿ.
ಸ್ವಾಮಿ
ಸತ್ಯವಂತರಿಗೆ ಅಸಹನೆ ಯಾಕೆ?
By skakkilayaನಿಮ್ಮ ಅನುಭವಕ್ಕೆ ಅನುಗುಣವಾಗಿ, ನಿಮಗೆ ಸರಿಯೆನಿಸಿದ್ದನ್ನು ಮಾಡುವ ಸ್ವಾತಂತ್ರ್ಯ ನಿಮಗಿದ್ದೇ ಇದೆ. ಆದರೆ, ನಿಮಗನಿಸಿದ್ದೆಲ್ಲವೂ ಸರಿ, ಉಳಿದದ್ದೆಲ್ಲಾ ಸುಳ್ಳು ಎನ್ನುವುದರಿಂದ ಅಥವಾ ಬೇರೆಯವರ ಮೇಲೆ ಆಧಾರರಹಿತವಾದ ಆಪಾದನೆಗಳನ್ನು ಮಾಡುವುದರಿಂದ ನಿಮ್ಮ ವರ್ಚಸ್ಸಿಗೆ ಒಳಿತೇನೂ ಆಗುವುದಿಲ್ಲ. ಯಾರು ಯಾರಿಂದ ಕಮಿಷನ್ ಪಡೆದರೆನ್ನುವುದನ್ನು ಯೋಗದ ಬಗ್ಗೆ ಅಧ್ಯಯನಗಳನ್ನು ಮಾಡಿದವರಲ್ಲೇ ಕೇಳಿ ನೋಡಿ; ಅವರ ವರದಿಗಳನ್ನು ಸಂಗ್ರಹಿಸಿ ಬರೆಯುವ ಕೆಲಸವನ್ನಷ್ಟೇ ನಾನು ಮಾಡಿರುವುದು. ಯೋಗಾಭ್ಯಾಸಿಗಳಿಗೆ ಸಿಟ್ಟು ಕಡಿಮೆಯಾಗಿ ಸಾತ್ವಿಕ ಗುಣ ಮೇಳೈಸುತ್ತದೆ ಎನ್ನುವುದಕ್ಕೆ ಆಧಾರವಿಲ್ಲವೆನ್ನುವುದು ಈಗಲಂತೂ ದಿಟವಾಯಿತು.
ಆಗಸದತ್ತ ಮುಖ ಮಾಡಿ ಉಗುಳುವುದು ಬುದ್ಧಿವಂತರ ಲಕ್ಷಣವಲ್ಲ. ಕ್ರೂರಿ ಅನ್ನುವುದನ್ನು ನೂರಾರು ವರುಶಗಳಿಂದ ತೋರಿಸಿಕೊಂಡು ಬಂದಿರುವ 'ನನ್ನ ವಿಜ್ಞಾನ'ದ ಬಲದಿಂದಲೇ ಬೆಳೆದಿರುವ ತಂತ್ರಜ್ಞಾನ ಹಾಗೂ ಅದಕ್ಕೆ ಕೈಜೋಡಿಸಿರುವ ಕೆಲವು ಬಹುರಾಷ್ಟ್ರೀಯ ಕಂಪೆನಿಗಳ ಉತ್ಪನ್ನಗಳ ನೆರವಿನಿಂದಲೇ ನಿಮ್ಮ ಟಿಪ್ಪಣಿಯನ್ನು ಬರೆಯಲು ಸಾಧ್ಯವಾಗಿದೆಯೆನ್ನುವುದನ್ನು ನೆನಪಿಸಲೇ? ವಿಜ್ಞಾನದ ಇಂತಹಾ ಯಾವ 'ಕ್ರೌರ್ಯಕ್ಕೂ' ಬಲಿಯಾಗದಂತೆ ಜಾಗ್ರತೆ ವಹಿಸಿ.
ತೆರೆದ ಮನದಿಂದ ಮತ್ತೊಮ್ಮೆ ಓದಿ
By skakkilayaಯೋಗ ಶಿಕ್ಷಣದಲ್ಲಾಗಲೀ, ಗೋ ಸಂಬಂಧಿ 'ಔಷಧ'ಗಳಲ್ಲಾಗಲೀ [ಏನವು?] ನಿದ್ದೆ ಕೆಡಿಸುವಷ್ಟು ಗಂಭೀರವಾದುದೇನೂ ಇಲ್ಲದಿರುವುದರಿಂದ ಅವುಗಳಿಂದಾಗಿ ನನ್ನ ನಿದ್ದೆ ಕೆಡುವುದಕ್ಕೆ ಸಾಧ್ಯವಿಲ್ಲ; ಆದರೂ ತಮ್ಮ ಕಾಳಜಿಗೆ ಧನ್ಯವಾದಗಳು.
ನಾವು ಕಳೆದ ಅರುವತ್ತು ವರ್ಷಗಳಿಂದ ಪ್ರಕಟವಾಗಿರುವ ಯೋಗದ ಬಗ್ಗೆ ನಡೆಸಲಾಗಿರುವ ಅಧ್ಯಯನಗಳ ಹೆಚ್ಚಿನೆಲ್ಲಾ ವರದಿಗಳನ್ನು ಓದಿದ ಬಳಿಕವೇ ನಮ್ಮ ಅನಿಸಿಕೆಗಳನ್ನು ಬರೆದಿದ್ದೇವೆ. [ಸವಿವರವಾದ ಲೇಖನ ಇಲ್ಲಿದೆ] ಇವು, ಯೋಗಾಭ್ಯಾಸದ ಬಗ್ಗೆ ಹೆಚ್ಚಾಗಿ ಯೋಗ ತಜ್ಞರೇ ನಡೆಸಿದ ಅಧ್ಯಯನಗಳಲ್ಲಿ, ಅವುಗಳ ಬಗ್ಗೆ ತಜ್ಞರು ನಡೆಸಿದ ವಿಶ್ಲೇಷಣೆಗಳಲ್ಲಿ ಮತ್ತು ಹೆಚ್ಚಾಗಿ ಬದಲಿ ಹಾಗೂ ಪೂರಕ ಚಿಕಿತ್ಸಾ ಪದ್ಧತಿಗಳ ಪತ್ರಿಕೆಗಳಲ್ಲಿ ವ್ಯಕ್ತಗೊಂಡಿರುವ ಅಭಿಪ್ರಾಯಗಳೇ ಆಗಿದ್ದು ಲೇಖಕನ ಸ್ವಂತ ಅಭಿಪ್ರಾಯಗಳನ್ನು ಇಲ್ಲಿ ತೂರಿಸಿಲ್ಲವೆನ್ನುವುದನ್ನು ನನ್ನ ಲೇಖನದಲ್ಲೇ ಸ್ಪಷ್ಟಪಡಿಸಿದ್ದೇನೆ. ಹಾಗಿರುವಾಗ ನಮ್ಮ ಅನಿಸಿಕೆಯು ಪೂರ್ವಾಗ್ರಹ ಪೀಡಿತವೆಂದೋ, ಮೌಢ್ಯಾಧಾರಿತವೆಂದೋ, ಹಾಸ್ಯಾಸ್ಪದವೆಂದೋ ಹೀಗಳೆಯುವುದು/ತೆಗಳುವುದೇ ಪೂರ್ವಾಗ್ರಹ ಪೀಡಿತವಾಗಿದೆ ಎನ್ನದೆ ವಿಧಿಯಿಲ್ಲ.
ಅಲೋಪತಿ ಇಂಗ್ಲೀಶ್ ಮುಂತಾದ ಹೆಸರುಗಳಿಂದ ಕರೆಯುವ ಔಷಧಗಳಿಂದ ಪ್ರಯೋಜನವಾಗದಿದ್ದಾಗ ನಿಮಗೆ ಯೋಗದಲ್ಲೆ ಪರಿಹಾರ ಸಿಕ್ಕದ್ದು ಹಾಗೂ ಯೋಗ ಪ್ರಾಣಾಯಾಮಗಳಿಂದ ನಿಮಗೇಗೇನು ಅಡ್ಡ ಪರಿಣಾಮಗಳು ಗೋಚರವಾಗಿಲ್ಲದಿರುವುದು ಸಂತಸದ ಸಂಗತಿ. ತಮ್ಮೆಲ್ಲಾ ಸಮಸ್ಯೆಗಳಿಗೆ ಯೋಗದಿಂದ ಯಾ ಗೋ ಸಂಬಂಧಿ 'ಔಷಧ'ಗಳಿಂದ ಪರಿಹಾರ ಪಡೆಯುವವರು ಸಾಕಷ್ಟಿರಬಹುದು; ಅದೇ ರೀತಿ ಬೈಪಾಸ್ ಇತ್ಯಾದಿ ಅತ್ಯಾಧುನಿಕ ಶಸ್ತ್ರ ಚಿಕಿತ್ಸೆಗಳನ್ನೂ, ಆಧುನಿಕ ವೈದ್ಯ ವಿಜ್ಞಾನದ ಇತರ ಚಿಕಿತ್ಸೆಗಳನ್ನೂ ಮಾಡಿಸಿಕೊಳ್ಳುವುದರ ಜೊತೆಗೆ ಯೋಗಾಭ್ಯಾಸವನ್ನೂ ಮಾಡುತ್ತಾ ತನ್ನ ಆರೋಗ್ಯಕ್ಕೆ ಯೋಗವೇ ಕಾರಣ ಎಂದು ಭಾಷಣ ಬಿಗಿಯುವ ಮಹನೀಯರೂ ಇದ್ದಾರೆ. ಇರಲಿ. "ಕೆಲವರಿಗೆ ವೈಯಕ್ತಿಕ ನೆಲೆಯಲ್ಲಿ, ಸೀಮಿತವಾಗಿ, ಯೋಗವು ಪ್ರಯೋಜನಕರವೆಂದು ಕಂಡುಬರಬಹುದು ಮತ್ತು ಯೋಗಾಭ್ಯಾಸವನ್ನು ಮಾಡಬಯಸುವ ಅಂತಹವರು ತಮ್ಮ ದೇಹಸ್ಥಿತಿ ಹಾಗೂ ಅದರ ಅಗತ್ಯಗಳಿಗೆ ಸರಿಹೊಂದುವ ಯೋಗಾಭ್ಯಾಸದ (ಪ್ರಾಣಾಯಾಮ, ಆಸನಗಳು ಇತ್ಯಾದಿಗಳ) ವಿಧಗಳ ಬಗ್ಗೆ ವೈದ್ಯರು ಹಾಗೂ ನುರಿತ, ಆಸಕ್ತ ಯೋಗತಜ್ಞರ ಸಲಹೆಯನ್ನು ಪಡೆದು ಯೋಗಾಭ್ಯಾಸವನ್ನು ಮಾಡಬಹುದು" ಎನ್ನುವುದನ್ನು ನನ್ನ ಲೇಖನದಲ್ಲೇ ಸ್ಪಷ್ಟವಾಗಿ ಹೇಳಿದ್ದೇನೆ. ನೀವೂ ಅವರಲ್ಲಿ ಒಬ್ಬರೆನ್ನಬಹುದು.
ಆದರೆ ನಿಮ್ಮೊಬ್ಬರಿಗೆ ಪ್ರಯೋಜನವಾಗಿದೆ ಹಾಗೂ ಯಾವ ಅಡ್ಡ ಪರಿಣಾಮಗಳು ಗೋಚರವಾಗಿಲ್ಲವೆಂದ ಮಾತ್ರಕ್ಕೆ, ಎಲ್ಲರಿಗೂ ಅದರಿಂದ ಪ್ರಯೋಜನವಾಗುತ್ತದೆ ಯಾ ಅಡ್ಡ ಪರಿಣಾಮಗಳು ಗೋಚರವಾಗುವುದಿಲ್ಲ ಎನ್ನಲು ಹೇಗೆ ಸಾಧ್ಯ? ಯೋಗದಿಂದ ಎಲ್ಲರಿಗೂ, ಎಲ್ಲ ರೋಗಗಳಿಗೂ ಪ್ರಯೋಜನವಿದೆಯೆಂದಾಗಲೀ, ಅದು ಎಲ್ಲರಿಗೂ ಅತಿ ಸುರಕ್ಷಿತವೆಂದಾಗಲೀ ಯೋಗದ ಬಗ್ಗೆ ನಡೆಸಲಾಗಿರುವ ನೂರಾರು ಅಧ್ಯಯನಗಳಲ್ಲೇ ಸಾಕಷ್ಟು ಆಧಾರಗಳು ದೊರೆಯುವುದಿಲ್ಲ, ಯೋಗ ತಜ್ಞರೂ ಹಾಗೆ ಹೇಳಿಕೊಳ್ಳುವುದಿಲ್ಲ. ನಾವೂ ಅದನ್ನೇ ಹೇಳಿರುವುದಷ್ಟೆ.
ಯೋಗದ ಬಗ್ಗೆ ಹಾಗೂ ಗೋವಿನ ಮಲ-ಮೂತ್ರಗಳ ಬಗ್ಗೆ ನಾನು ಬರೆದಿರುವ ಲೇಖನಗಳನ್ನು ತೆರೆದ ಮನಸ್ಸಿನಿಂದ ಇನ್ನೊಮ್ಮೆ ಓದಿದರೆ ನಿಮಗೂ ಇದು ತಿಳಿಯಬಹುದು.
[quote]ಯೋಗ
By Anonymous (not verified)[quote]ಯೋಗ ಶಿಕ್ಷಣದಲ್ಲಾಗಲೀ, ಗೋ ಸಂಬಂಧಿ 'ಔಷಧ'ಗಳಲ್ಲಾಗಲೀ [ಏನವು?] ನಿದ್ದೆ ಕೆಡಿಸುವಷ್ಟು [/quote]
ಅರ್ಥವಾಗದೇ ಇದ್ದರೂ ಉತ್ತರ ಕೊಟ್ಟಿದ್ದೀರಿ
ದ್ವಂದ್ವ ;-)
ಇರಲಿ ಬಿಡಿ.
ತಮ್ಮ ರಾಸಾಯನಿಕ ಔಷಧಗಳು ಅಂತಿಮವೆ? ಇಂದು ಔಷಧವೆಂದು ಕಂಡದ್ದು ಕೇವಲ ತಿಂಗಳಷ್ಟರಲ್ಲೆ ನಿಷೇಧಿಸಲ್ಪಟ್ಟಾಗ ತಾವು ಹಾಗೇಯೆ ಬರೆದಿದ್ದೀರ? ಇದ್ದರೆ ಕೊಂಡಿ ಕೊಡಿ. ತಾವು ಪ್ರತಿಪಾದಿಸುವ ರಾಸಾಯನಿಕ ಔಷಧಗಳು ಮಾನವ ಕಂಡು ಹಿಡಿದ ರಾಸಾಯನಿಕಗಳೆ ಅಥವ್ ಆವೂ ಕೂಡ ಭೂಮಿಯ ಮೇಲೆ ದೊರಕುವ ರಾಸಾಯನಿಕಗಳಿಂದ ತಯಾರಾಗುವ ೩ ನೆಯ ವಸ್ತುಗಳೇ?
ಗೋ ಆಧಾರಿತ (ಸಂಬಂದಿ)ಔಷಧಗಳಿಂದ ಎಷ್ಟು ಸಾವು ನೋವುಗಳು ಖಾಯಿಲೆಗಳು ಅಡ್ಡಪರಿಣಾಮಗಳು ಶಾಶ್ವತ ಅಂಗವಿಕಲತೆ ಉಂಟಾಗಿವೆ ಎಂಬ ಬಗ್ಗೆ ಮಾಹಿತಿಯಿದ್ದರೆ ತಿಳಿಸಿ. ಇದು ಪೂರ್ವಗ್ರಹವಲ್ಲ ತಿಳಿದುಕೊಳ್ಳುವ ಹಪಾಹಪಿ
ನಿಮ್ಮ ಹಪಾಹಪಿ ಒಳ್ಳೆಯದೇ!
By skakkilayaನಿಮ್ಮ ಹಪಾಹಪಿ ಒಳ್ಳೆಯದೇ. ಆದರೆ ಗೋ ಆಧಾರಿತ (ಸಂಬಂದಿ)ಔಷಧಗಳ ಬಗ್ಗೆ ನಿಮ್ಮ ಪ್ರಶ್ನೆಗಳ ದಿಕ್ಕು ಸ್ವಲ್ಪ ಬೇರೆಯಾಗಿದೆ ಅಷ್ಟೆ. ನೀವು ಕೇಳಿರುವ ಪ್ರಶ್ನೆಗಳ ಜೊತೆಗೆ, ಗೋವಿನ ಕಶ್ಮಲಗಳು ಅದು ಹೇಗೆ ಔಷಧಗಳಾಗುತ್ತವೆ ಎನ್ನುವುದಕ್ಕೆ ಅವುಗಳ ಬಗ್ಗೆ ‘ಸಂಶೋಧನೆಗಳನ್ನು’ ನಡೆಸಿದವರೇ ಉತ್ತರಿಸಬೇಕಾಗುತ್ತದೆಯಲ್ಲದೆ ನಾನಲ್ಲ; ನಾನೂ ಅವರಲ್ಲಿ ಇವೇ ಪ್ರಶ್ನೆಗಳನ್ನು ಈಗಾಗಲೇ ಕೇಳಿದ್ದು ಅವರ ಉತ್ತರಕ್ಕಾಗಿ ಕಾಯುತ್ತಿದ್ದೇನೆ, ನೀವೂ ಅವರಲ್ಲಿ ಕೇಳಿ ಕಾಯುತ್ತಾ ಕೂರಬಹುದು. ನನಗೆ ಅರ್ಥವಾಗದ್ದು ನಿಮಗೂ ಅರ್ಥವಾಗಿಲ್ಲ ಎನ್ನುವುದು ಸ್ಪಷ್ಟವಿರುವಾಗ, ಗೋವಿನ ಉತ್ಪನ್ನಗಳನ್ನು ಔಷಧಗಳೆಂದು ನಮ್ಮ ಜನರ ಮೇಲೆ ಹೇರುವುದು ಯಾಕೆ ಎನ್ನುವುದೇ ನನ್ನ ಪ್ರಶ್ನೆ, ಅಷ್ಟೆ.
ಆಧುನಿಕ ವೈದ್ಯ ವಿಜ್ಞಾನದಲ್ಲಿ ಬಳಸುವ ಔಷಧಗಳೇ ಅಂತಿಮವೆಂದು ನಾನೆಲ್ಲೂ ಹೇಳಿಲ್ಲ. ನಾವು ಬಳಸುವ ಹಲವಾರು ಔಷಧಗಳಲ್ಲಿ ನೈಸರ್ಗಿಕವಾದುವುಗಳೂ ಇವೆ, ಕೃತಕವಾಗಿ ತಯಾರಿಸಲಾದವುಗಳೂ ಇವೆ. ಇವೆಲ್ಲವೂ ಹಲವು ಹಂತದ ಪರೀಕ್ಷೆಗಳ ಬಳಿಕ ಮನುಷ್ಯರಲ್ಲಿ ಬಳಕೆಗೆ ಬರುತ್ತವೆ, ಆ ನಂತರವೂ ಅವುಗಳ ಗುಣಾವಗುಣಗಳ ಬಗ್ಗೆ ಅಧ್ಯಯನಗಳು ಮುಂದುವರಿಯುತ್ತವೆ. ಈ ಔಷಧಗಳಿಂದ ಆಗಬಹುದಾದ ತೊಂದರೆಗಳ ಬಗ್ಗೆ ಕಾಲಕಾಲಕ್ಕೆ ವೈದ್ಯರುಗಳಿಗೂ, ಸಾರ್ವಜನಿಕರಿಗೂ ಸೂಕ್ತವಾದ ಮಾಹಿತಿಯನ್ನು ನೀಡಲಾಗುತ್ತದೆ, ಗಂಭೀರವಾದ ಅಡ್ದ ಪರಿಣಾಮಗಳುಂಟಾದ ವರದಿಗಳೇನಾದರೂ ಇದ್ದರೆ (ಅಂತಹವು ತೀರಾ ಅಪರೂಪವೆನ್ನಬಹುದು) ಅಂತಹ ಔಷಧಗಳ ಬಳಕೆಯನ್ನೇ ನಿಷೇಧಿಸಲಾಗುತ್ತದೆ. [ಇತ್ತೀಚೆಗೆ ಅತ್ಯಂತ ಸಾಮಾನ್ಯವಾಗಿ ಬಳಕೆಯಾಗುತ್ತಿರುವ ‘ಮಾನವ ಇನ್ಸುಲಿನ್’ ಬಗ್ಗೆ ನಾನು ಬರೆದಿರುವುದನ್ನು ಓದಬಹುದು]
ಸದಾ ತನ್ನನ್ನು ತಾನು ಪರೀಕ್ಷೆಗೊಳಪಡಿಸುತ್ತಾ, ತಪ್ಪುಗಳನ್ನು ಗುರುತಿಸಿಕೊಂಡು ಸರಿಪಡಿಸಿಕೊಳ್ಳುತ್ತಾ ಮುನ್ನಡೆಯುವುದು ವಿಜ್ಞಾನದ ಲಕ್ಷಣ. ಮಾಡಿದ್ದೇ ಸರಿ, ಅದರಲ್ಲಿ ಪರೀಕ್ಷಿಸುವುದೇನೂ ಇಲ್ಲ, ಅದನ್ನು ಯಾರೂ ಪ್ರಶ್ನಿಸಲೇಬಾರದು ಎನ್ನುವುದು ಗೊಡ್ಡು ಸಂಪ್ರದಾಯವಾದಿಗಳ ಅಹಂಕಾರ. ಆಯ್ಕೆಯ ಸ್ವಾತಂತ್ರ್ಯ ಎಲ್ಲರಿಗೂ ಇದೆ.
ಬಹುಶಃ ಯೋಗ
By Anonymous (not verified)ಬಹುಶಃ ಯೋಗ ಶಿಕ್ಷಣಗಳು ಮತ್ತು ಗೋ ಸಂಭಂದಿ ಔಷಧಗಳು ತಮ್ಮ ನಿದ್ದೆಕೆಡಿಸಿರಬೇಕಲ್ಲವೆ?
ಯೋಗದಿಂದ ಪ್ರಯೋಜನ ಪಡೆದವರಲ್ಲಿ ನಾನೊಬ್ಬ. ನೀವು ಹೇಳುವ ಅಲೋಪತಿ ಇಂಗ್ಲೀಶ್ ಮುಂತಾದ ಹೆಸರುಗಳಿಂದ ನೀವು ಕರೆಯುವ ಔಷಧಗಳಿಂದ ಪ್ರಯೋಜನವಾಗದಿದ್ದಾಗ ನನಗೆ ಪರಿಹಾರ ಸಿಕ್ಕದ್ದು ಯೋಗದಲ್ಲೆ.
ಯೋಗ ಪ್ರಾಣಾಯಾಮಗಳಿಂದ ನನಗೇನು ಅಡ್ಡ ಪರಿಣಾಮಗಳು ಗೋಚರವಾಗಿಲ್ಲ. ಪೂರ್ವಗ್ರಹ ಪೀಡಿತ ಬರಹಕ್ಕೆ ಸ್ಪಷ್ಟ ಉದಾಹರಣೆ ನಿಮ್ಮದು.
Post new comment